ಮನೆಗೆ ತರಿಸಿಕೊಂಡು ಕೊರೋನಾ ಲಸಿಕೆ ಹಾಕಿಸಿಕೊಂಡ ಬಿ.ಸಿ. ಪಾಟೀಲ್ | Janata news
ಹಾವೇರಿ : ಸ್ವತ: ಪ್ರಧಾನಿ ಮೋದಿ ಆಸ್ಪತ್ರೆಗೆ ಹೋಗಿ ನಿನ್ನೆ ಲಸಿಕೆ ಪಡೆಯೋ ಮೂಲಕ 130 ಕೋಟಿ ಜನರಿಗೆ ಲಸಿಕೆ ಪಡೆಯಲು ಪ್ರೇರೇಪಿಸಿದ್ದಾರೆ. ಆದ್ರೆ ಈ ಮಧ್ಯೆ, ರಾಜ್ಯದಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಹಾಗೂ ಅವರ ಕುಟುಂಬ ಸಹ ಲಸಿಕೆ ಹಾಕಿಸಿಕೊಂಡಿದ್ದು ಸಚಿವರ ದೌಲತ್ತಿಗೆ ಆಕ್ರೋಶ ವ್ಯಕ್ತವಾಗಿದೆ.
ಈ ಮಧ್ಯೆ ಬಿಜೆಪಿ, ತನ್ನ ಸಂಸದರು, ಸಚಿವರು ಹಾಗೂ ಶಾಸಕರಿಗೆ ಕೊರೊನಾ ಲಸಿಕೆ ಪಡೆಯುವಂತೆ ಸೂಚಿಸಿದೆ ಎಂದು ತಿಳಿದು ಬಂದಿದೆ. ಹೀಗಾಗಿ ರಾಜ್ಯದಲ್ಲಿಯೂ ಬಿಜೆಪಿ ಸಚಿವರು, ಶಾಸಕರು ಒಬ್ಬೊಬ್ಬರಾಗಿ ಕೊರೊನಾ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಹಾವೇರಿ ಜಿಲ್ಲೆಯ ಹಿರೇಕೆರೂರಿನ ತಮ್ಮ ಮನೆಯಲ್ಲಿ ಸರ್ಕಾರಿ ವೈದ್ಯರಿಂದ ಕೊರೊನಾ ಲಸಿಕೆ ಪಡೆದಿದ್ದಾರೆ. ಪಾಟೀಲ್ ಪತ್ನಿ ಕೂಡ ಮನೆಯಲ್ಲಿಯೇ ಲಸಿಕೆ ಪಡೆದುಕೊಂಡಿದ್ದಾರೆ.
ಮನೆಯಲ್ಲಿಯೇ ಕೂತು ಸಚಿವರು ಕೊರೋನಾ ಲಸಿಕೆ ಹಾಕಿಸಿಕೊಂಡಿದ್ದಕ್ಕೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಚಿವರಾದ ಮಾತ್ರಕ್ಕೆ ಆರೋಗ್ಯ ಸಿಬ್ಬಂದಿಯನ್ನೇ ತಮ್ಮ ಮನೆಗೆ ಕರೆಸಿ ದರ್ಪ ತೋರಿಸುವುದು ಎಷ್ಟು ಸರಿ ಎಂದು ಕೆಲವರು ಸಚಿವರ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮನೆಯಲ್ಲಿಯೇ ಲಸಿಕೆ ಪಡೆದಿದ್ದು ಏಕೆ? ಎಂಬ ಪ್ರಶ್ನೆ ಕೇಳಿ ಬರುತ್ತಿದೆ. ಲಸಿಕೆ ಪಡೆಯುವಾಗ ಮುನ್ನೆಚ್ಚರಿಕೆ ಕ್ರಮಗಳು ಅಗತ್ಯ. ಹೀಗಾಗಿಯೇ ಎಲ್ಲರಿಗೂ ಆಸ್ಪತ್ರೆ ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಪಡೆಯಲು ಸೂಚನೆ ನೀಡಲಾಗಿದೆ.
ಮನೆಗೆ ವೈದ್ಯರನ್ನು ಕರೆಸಿಕೊಂಡು ಲಸಿಕೆ ಹಾಕಿಸಿಕೊಂಡ ಸಂಬಂಧ ಸ್ಪಷ್ಟನೆ ನೀಡಿರುವ ಸಚಿವ ಬಿ.ಸಿ ಪಾಟೀಲ್, 30 ನಿಮಿಷಗಳ ಕಾಲ ವಿಶ್ರಾಂತಿ ಪಡೀಬೇಕೆಂದು ಗೊತ್ತಿತ್ತು. ನಿನ್ನೆ ನಾನು ಮನೆಗೆ ತಡವಾಗಿ ಬಂದಿದ್ದೆ. ಕ್ಷೇತ್ರದ ಜನರೂ ಕೂಡ ಬೆಳಗ್ಗೆಯೇ ಮನೆಗೆ ಬಂದಿದ್ದರು. ಹೀಗಾಗಿ ಮನೆಯಲ್ಲಿಯೇ ವೈದ್ಯರಿಂದ ಲಸಿಕೆ ಪಡೆದಿದ್ದೇನೆ. ಆಸ್ಪತ್ರೆಗೆ ಹೋಗಿ ಲಸಿಕೆ ಪಡೆಯಬೇಕೆಂದು ಗೊತ್ತಿರಲಿಲ್ಲ. ಈ ವಿಷಯ ನನಗೆ ಗೊತ್ತಾಗಿದ್ದರೆ ಆಸ್ಪತ್ರೆಗೆ ಹೋಗುತ್ತಿದ್ದೆ. ನನಗೆ ಅನಾರೋಗ್ಯ ಇದ್ದಾಗ ವೈದ್ಯರು ಮನೆಗೆ ಬರ್ತಿದ್ರು. ಅದೇ ರೀತಿ ಇಂದು ವೈದ್ಯರನ್ನು ಕರೆದು ಲಸಿಕೆ ಪಡೆದಿದ್ದೇನೆ ಎಂದು ಹೇಳಿದ್ದಾರೆ.